ಯಶೋಧರ
ಮಹೇಶ್ವರಿ ,ಕರ್ನಾಟಕ ರಾಜ್ಯದ ಶೇಕಡಾ ೫೦ರಷ್ಟು ಭೂ ಭಾಗವನ್ನು ಹೊಂದಿರುವ ಬಯಲು ಸೀಮೆಯ ಒಂದು ಪುಟ್ಟ ತಾಲ್ಲೂಕು ಕೇಂದ್ರ . ರಾಜಧಾನಿಯಿಂದ ಹೊರಡುವ ರಾಷ್ಟ್ರೀಯ ಹೆದ್ದಾರಿ ಪಟ್ಟಣವನ್ನು ಹಾದುಹೋಗುತ್ತದೆ .ಊರನ್ನು ರಾಜಧಾನಿಯ ಕಡೆಯಿಂದ ಪ್ರವೇಶಿಸುವಾಗಲೇ ಮನಸ್ವಿನಿ ನದಿಯ ಕೃಪೆಯಿಂದ ತುಂಬಿದ ಕೆರೆಯನ್ನು ಕಾಣಬಹುದು ,ಕೆರೆಯ ಪಕ್ಕದಲ್ಲೇ ಕರದಲ್ಲಿ ಶಂಖ ,ಚಕ್ರಗಳನ್ನು ಹಿಡಿದುಕೊಂಡು ಪದ್ಮಾಸನದಲ್ಲಿ ಕುಳಿತಿರುವ ಮಹೇಶ್ವರಿ ಅಮ್ಮನವರ ಸನ್ನಿದಿ . ತಾಲ್ಲೂಕಿನ ಪ್ರಮುಖ ಬೆಳೆ ತೆಂಗು ಆಗಿದ್ದರಿಂದ ಪಟ್ಟಣದ ಒಂದು ದಿಕ್ಕಿನಲ್ಲಿ ಬೃಹತ್ ಕೊಬ್ಬರಿ ಮಾರುಕಟ್ಟೆ . ಹಾಗೆ ಮುಂದುವರೆದರೆ ಎಲ್ಲಾ ಪಟ್ಟಣಗಳಲ್ಲಿ ಇರುವ ಹಾಗೆ ರೈಲ್ವೆ ನಿಲ್ದಾಣ,ಹೋಟೆಲ್ಗಳು,ಸರ್ಕಾರಿ ಕಛೇರಿಗಳು ,ಶಾಲೆಗಳು,ಹೀಗೆ ಒಂದು ನಾಗರೀಕನಿಗೆ ಅವಶ್ಯಕತೆ ಇರುವ ಎಲ್ಲಾ ಸವಲತ್ತುಗಳು ಮಹೇಶ್ವರಿಯನ್ನು ಸುಂದರ ನಗರವನ್ನಾಗಿ ಮಾಡಿದೆ .
ನಾನು ಮುಂಜಾನೆ ಸುಮಾರು ೫ ಗಂಟೆಗೆ ನನ್ನ ಸೀಟಿನ ಮೇಲೆ ಕುಳಿತು ಮಹೇಶ್ವರಿಯನ್ನು ಮನದಲ್ಲೇ ನೆನೆದು ,ಕಂಡಕ್ಟರ್ ಬಸವರಾಜು "ಯಾರ್ರೀ ,,ಮಹೇಶ್ವರಿ ,ಮಲ್ಲಿಗೆಮೊಗ್ಗೆ ,ಶ್ರುಂಗಗಿರಿ... ರೈಟ್ ರೈಟ್ " ಎಂದು ಮೂರ್ನಾಕು ಬಾರಿ ಕೂಗಿದಾಗಲೇ ಗಾಡಿಯನ್ನು ಮೊದಲೇ ಎರಡು ಮೂರು ನಿಮಿಷ ಆನ್ ಮಾಡಿ ನಿಲ್ಲಿಸಿಕೊಂಡವನು ಗಂಟೆಗೆ ೭೦-೮೦ ಸ್ಪೀಡ್ ನಲ್ಲಿ ರಾಜಧಾನಿಯಿಂದ ಮಹೇಶ್ವರಿಯ ಕಡೆಗೆ ಮುಖ ಮಾಡಿ ಹೊರಟು ಬಿಡುತೆನ್ನೆ . ಒಟ್ಟಿನಲ್ಲಿ ನನ್ನ ಗುರಿ ಒಂಬತ್ತು ವರೆ ಗಂಟೆಗೂ ಮುಂಚಿತವಾಗಿ ಮಹೇಶ್ವರಿಯನ್ನು ತಲುಪುವುದು ಅಷ್ಟೇ .. ತಡವಾದರೆ ಯಶೋದರ ಎಲ್ಲಿಯಾದರೂ ಹೋಗಿಬಿಟ್ಟರೆ ಅನ್ನುವ ಭಯ .
ಯಶೋದರ ಬರುವುದು ಯಾವಾಗಲೂ ತಡವಾಗುತಿತ್ತು ,ಆದ್ದರಿಂದ ನಾನು ಮಹೇಶ್ವರಿ ಬಸ್ ನಿಲ್ದಾಣ ದಲ್ಲೇ " ನೋಡ್ರಿ ,ತಿಂಡಿಗೆ ಅರ್ಧ ಗಂಟೆ ಟೈಮ್ ಇದೆ .. "ಎಂದು ಹೇಳಿ ನಾನು ಸೀಟಿನ ಮೇಲೆ ಯಶೋದರಳಿಗಾಗಿ ಕಾಯುತ್ತಾ ಕುಳಿತುಕೊಳ್ಳುತಿದ್ದೆ . ಯಾವಾಗ ಜನ "ಕಲ್ಲೂರ್ ಬಸ್ ಬಂತು ,ಕಲ್ಲೂರ್ ಬಸ್ ಬಂತು " ಎಂದು ಕೂಗಿದಾಗಲೇ ನಾನು ನನ್ನ ಯಶೋದರಕ್ಕ ಬಂದಳು ಎಂದು ತಕ್ಷಣವೇ ಎಚ್ಚರವಾಗಿ ಬಿಡುತ್ತಿದ್ದೆ . ಒಂದು ಬಸ್ಸಿನಲ್ಲಿ ಮೂರು ಬಸ್ ಜನರನ್ನು ತುಂಬಿಸಿಕೊಂಡು ,ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಡ್ರೈವರ್ ಶಾಂತಪ್ಪ ,ಒಂದೆರಡು ಬಾರಿ ಹಾರ್ನ್ ಮಾಡಿ ಯಶೋದರಳನ್ನು ಸ್ಟಾಂಡ್ ಒಳಗೆ ನುಗ್ಗಿಸಿದ .
" ಯಶೋದರ " -ಮಹೇಶ್ವರಿ ತಾಲೂಕಿನ ಉಪ್ಪೂರು ,ಗಂಗರ ,ಕಲ್ಲೂರು ,ಹೊಸಕೆರೆ ಮುಂತಾದ ಹಳ್ಳಿಗಳನ್ನು ದಾಟಿ ಸರಿಯಾಗಿ ಒಂಬತ್ತು ವರೆಗೆ ಪಟ್ಟಣವನ್ನು ತಲುಪುತ್ತದೆ . ಕಲ್ಲೂರಿನಿನ್ದ ಹೊರಡುವ ಫಸ್ಟ್ ಬಸ್ ಕೂಡ ಆಗಿರುವುದರಿಂದ ,ಸುಮಾರು ೧೮ ಕಿ ಮಿ ದೂರವಿರೋ ತಾಲೂಕು ಕೇಂದ್ರವನ್ನು ತಲುಪುವುದಕ್ಕೆ ಸರಾಸರಿ ಒಂದು ಗಂಟೆಯಾದರು ಬೇಕು . ಪುಸ್ತಕಗಳ ಮಣ ಭಾರ ಹೊತ್ತು ಕಾನ್ವೆಂಟ್ಗೆ ಹೋಗುವ ಮಕ್ಕಳಿಂದ ಹಿಡಿದು ,ಕಾಲೇಜ್ ಹುಡುಗರು ,ಹುಡುಗಿಯರು ,ಗಾರ್ಮೆಂಟ್ಗಳಲ್ಲೋ ,ಎಂಟರ್ಪ್ರೈಸ್ಗಳಲ್ಲೊ ಕೆಲಸ ಮಾಡಲು ಬರುವ ಯುವತಿಯರು ,ಕೊಬ್ಬರಿ ಮಾರುಕಟ್ಟೆಯಲ್ಲಿ ಲೆಕ್ಕ ಬರಿಯಲೋ ,ಮೂಟೆ ಹೊರಲೋ ಬರುವ ಜನರು ,ಗಾರೆ ಕೆಲಸ ಮಾಡಿದರೆ ದಿನದ ಖರ್ಚಿಗಾದರು ಆಗುತ್ತದೆ ಎಂದು ಮಧ್ಯಾನದ ಊಟವನ್ನು ಟಿಪನ್ ಕ್ಯಾರಿಯರ್ ಗೆ ಕರ್ಚಿಪ್ ಅನ್ನು ಸುತ್ತಿಕೊಂಡು ಬರುವ ಬಸಮ್ಮ ,ಗಂಗಣ್ಣ , ಸಿಡುಬು ಅಥವಾ ಮತ್ತಿನ್ಯಾವುದೋ ರೋಗಗಳಿಗೆ ಚುಚ್ಚು ಮದ್ದು ಹಾಕಿಸಲು ಮಗು ಮತ್ತು ಬಾಣಂತಿಯರನ್ನು ಕರೆದುಕೊಂಡು ಬರುವ ತಾಯಂದಿರು ,ಮೂರು ದಿವಸದಿಂದ ಮೈ ಬಿಸಿ ಕಮ್ಮಿ ಆಗಲೇ ಇಲ್ಲ ಎಂದು ದೊಡ್ಡ ಆಸ್ಪತ್ರೆಗೆ ತೋರಿಸಲೆಂದು ಬರುವವರ ಜೊತೆಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಲು ,ಅರೆ ಕಾಲಿಕ ಉಪನ್ಯಾಸಕರು ಹೀಗೆ ಎಲ್ಲಾ ವರ್ಗದವರು ಯಶೋದರಳನ್ನೇ ನಮ್ಬಿದ್ದರು.
ನನಗೆ ಎಷ್ಟೋ ಭಾರಿ ಅನಿಸುತ್ತದೆ ,ನಾನು ಯಶೋಧರಳನನ್ನು ಚಾಲನೆ ಮಾಡಬಹುದೇ? ಎಂದು ....."ನೀವ್ ರಾಜಹಂಸ ಓಡ್ಸೋರು ,,ನಿಮ್ಗೆ ಇವೆಲ್ಲ ಆಗಕಿಲ್ಲ ಬಿಡ್ರಿ .." ಅಂತ ನನ್ನ ಮನಸ್ಸೇ ಹೇಳಿದೆ .ನನಗೂ ಹಾಗೆ ಅನ್ನಿಸಿತ್ತು ,,ನನ್ನ ರಾಜಹಂಸದಲ್ಲಿ ಒಬ್ಬರು ತುಟಿಕ್ ಪಿಟಿಕ್ ಅನ್ನುವುದಿಲ್ಲ ,ಸ್ಟ್ಯಾಂಡಿಂಗ್ ಅಂತು ಮೊದಲೇ ಇಲ್ಲ .. ಚಾಲನೆ ಮಾಡುವುದು ಕೂಡ ಹೆದ್ದಾರಿಗಳಲ್ಲೇ ..ಲಗೇಜ್ ಗಳು ಏನಿದ್ದರೂ ಅಬ್ಬಬ್ಬ ಅಂದರೆ ಒಂದು ಸೂಟ್ಕೇಸ್ ,ಬ್ಯಾಕ್ ಪ್ಯಾಕ್ ಅತ್ವ ಒಂದು ಲ್ಯಾಪ್ಟಾಪ್ ,,ಇನ್ನು ಜಾಸ್ತಿ ಇತ್ತು ಅಂದ್ರೆ ಡಿಕ್ಕಿಗೆ ಹಾಕ್ತಿವಿ ...ಆದರೆ ಯಶೋದರ ತಾನಿರುವಷ್ಟೆ ತೂಕವನ್ನು ಹೊರುತ್ತಾಳೆ ... ಡಿಕ್ಕಿ ತುಂಬಿದ ಮೇಲೆ ತನ್ನ ತಲೆಯ ಮೇಲೆ ಹೊತ್ತಿಕೊಳ್ಳುತ್ತಾಳೆ ,ಬರಿ ಸಾಮಾನು ಆಗಿದ್ದರೆ ಸಹಿಸಬಹುದೇನೋ ,ಜನರೂ ಏರುತ್ತಾರೆ .. ಒಂದೊಂದು ಬಾರಿ ಕುರಿ ,ಮೇಕೆ ,ಕೋಳಿಗಳನ್ನು ಹತ್ತಿಸಿಕೊಂಡಿದ್ದಾಳೆ .ಅವಳ ಲಗೆಜ್ಗಳು ಏನಿದ್ದರು ಎಲ್ಲಾ ಮೂಟೆಗಟ್ಟಲೆ ಅನ್ನಬಹುದು . ಸಾಯ೦ಕಾಲ ಹೊರಡುವಾಗ ಬೆಳಿಗ್ಗೆ ಬಂದ ಜನರ ಜೊತೆ ಅವರ ಲಗೆಜ್ಗಳು,ಎಲ್ಲವೂ ವೈರ್ ಬ್ಯಾಗ್ಗಳೋ ,ಭತ್ತದ ಚೀಲಗಳೊದ್ದೋ ಆಗಿರುತ್ತವೆ . ಚೀಲಗಳಲ್ಲಿ ದಿನನಿತ್ಯದ ಸಾಮಾನಿನ ಜೊತೆಗೆ ಪುರಿ ,ಕಡಲೆಬೀಜ ,ದ್ರಾಕ್ಷಿ ,ಹೂವುಗಳು ಇರುತ್ತಿದವು . ಅದೂ ಎಂತಹ ರಸ್ತೆಗಳಲ್ಲಿ ,,,.,,ಅದೂ ಯಶೋದರ ಒಬ್ಬಳೇ ...
ಯಶೋದರ ಹುಟ್ಟಿದ್ದೇ ನಮ್ಮ ಕಾಲದಲ್ಲಿ ಅನ್ನಬುಹುದು ... ನಾನಿನ್ನು ನಾಲ್ಕನೆ ಕ್ಲಾಸು .. ಶನಿವಾರ ಸಂಜೆ ಕಲ್ಲೂರಿನ ಪ್ರಮುಖ ಬೀದಿಗಳಲ್ಲಿ ಗರುಡಗಂಭ ಹಿಡಿದು ಕೊಂಡು ರಾಮ ಭಜನೆ ಮಾಡಿಕೊಂಡು ಹನುಮನ ದೇವಸ್ತಾನದಲ್ಲಿ ಪನಿವಾರಕ್ಕಾಗಿ ಹುಡುಗರೆಲ್ಲ ಕಾಯುತ್ತಿದೆವು. ಅಷ್ತರಲ್ಲೆ ಒಂದು ಘೋರ ಸುದ್ದಿ ಬಂತು "ಶಾನುಭೋಗರು ಹೆಂಡತಿ ಜಾನಕಮ್ಮ ನವರು ಮಹೇಶ್ವರಿಯ ದೊಡ್ಡ ಆಸ್ಪತ್ರೆಗೆ ಹೋಗಕ್ಕೆ ಮುಂಚೆನೇ ಸತ್ಹೊದ್ರಂತೆ... ಹಂಗೆ ಗಾಡಿಲೇ ಮಲಗಿಸಿಕೊಂಡು ಊರಾಚೆ ಅಶ್ವತ್ ಕಟ್ಟೆತವ ಮಲಗಿಸಿದರಂತೆ".ಇಡಿ ಊರೇ ಅಶ್ವತಕಟ್ಟೆಗೆ ಓಡಿ ಹೋಯಿತು ಶಾನುಭೋಗರು ತನ್ನ ಮಡದಿಗೆ ಆದ ತೊಂದರೆ ಯಾರಿಗೂ ಆಗ ಬಾರದೆಂದು ,ತಮ್ಮ ಅರ್ಧ ಅಸ್ತಿಯನ್ನು ಮಾರಿ ಊರಿಗೊಂದು ಬಸ್ ವ್ಯವಸ್ತೆ ಮಾಡಿಸಿದರು . . . ವೀರಣ್ಣ ದಿನ್ನಕ್ಕೆ ಎರಡು ಸೇರು ಭತ್ತ ಅನ್ನೋ ಹಾಗೆ ಡ್ರೈವರ್ ಆಗಲು ಒಪಿದ್ದ ". . . ಆ ಸನ್ದರ್ಭದಲ್ಲೇ ನಮ್ಮ ಊರಿನ ಅನೇಕ ಹುಡುಗರಿಗೆ ನಮ್ಮ ಶಾನುಭೋಗರ ರೀತಿ ನಾವು ನಮ್ಮ್ದ ಹಳ್ಳಿಗೆ ನಾವು ಸೇವೆ ಮಾಡಬೇಕೆಂದು ಅನ್ನಿಸಿದ್ದು . ಆ ಬಸ್ ಸಹಾಯದಿಂದಲೇ ನಾನು ಪಟ್ಟಣಕ್ಕೆ ಬಂದು ,ಒಂದಿಷ್ಟು ಓದಿದ್ದು ,ಮತ್ತೆಅದು ತಲೆಗೆ ಹತ್ತಲಿಲ್ಲವಾದ್ದರಿಂದ ,ನಾನು ಯಶೋಧರೆಯ ಸಾರಥಿಯಾದೆ.
ಆದರೆ ನಾನು ಮಾಡಿದ್ದೇನು ,,ಕರ್ನಾಟಕ ಸರ್ಕಾರಕ್ಕೆ ಚಾಲಕ ವೃತ್ತಿಗೆ ಅರ್ಜಿ ಹಾಕ್ಕಿದ್ದೆ ,ಕೆಲಸವು ಸಿಕ್ಕಿತು ,ಹಳ್ಳಿಯಿಂದ ರಾಜಧಾನಿಗೆ ಓಡಿದೆ .. ಯಶೋಧರ ಓಡಿಸಲಿಲ್ಲ .. ಏನೋ ತಪ್ಪಿನ ಅರಿವಾಗಿ ಅವಳನ್ನು ಹತ್ತು ನಿಮಿಷ ದಿನ ನಿತ್ಯ ಮಹೇಶ್ವರಿಯಲ್ಲಿ ನೋಡುವುದು .. ನನ್ನ ಬಗ್ಗೆ ನನಗೆ ಅಸಹ್ಯ ..ನನ್ನದು ಹೋಗಲಿ ಬಿಡಿ . . .ಎಷ್ತೊ ಜನ ತಮ್ಮ ನೆಲದಲ್ಲಿ ಓದಿ ಪರ ದೇಶಗಳಿಗೆ ದುಡಿಯಲು ಹೋಗುತ್ತಾರೆ ... ನಮಗೆ ಜೀವ ತುಂಬಿದ ತಾಯಿಯನ್ನು ಸಲಹುವವರು ಯಾರು ?
----ಲಕ್ಷ್ಮಣಪ್ಪ ಕಲ್ಲೂರು

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ